UI movie Warner video released. ಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು “ವಾರ್ನರ್‌” ಮೂಲಕ ಹೇಳಿದ ರಿಯಲ್ ಸ್ಟಾರ್.

ಧಿಕ್ಕಾರಕ್ಕಿಂತ ಆಧಿಕಾರ ಮುಖ್ಯ ಎಂದು “ವಾರ್ನರ್‌” ಮೂಲಕ ಹೇಳಿದ ರಿಯಲ್ ಸ್ಟಾರ್ .

ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಹಾಗೂ ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ .

ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಸುಮಾರು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ ಉಪೇಂದ್ರ ಅವರು ಇವೆರಡನ್ನೂ ಬಿಡುಗಡೆ ಮಾಡದೆ ವಾರ್ನರ್ ಬಿಡುಗಡೆ ಮಾಡಿದ್ದಾರೆ. ಈ‌ ವಾರ್ನರ್ ನಲ್ಲಿ 2040ರ ಕಾಲಘಟ್ಟದ‌ ಪರಿಸ್ಥಿತಿಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. “UI” ಚಿತ್ರ ಇದೇ ತಿಂಗಳ 20 ರಂದು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಕಿತ್ತು ತಿನ್ನುವ ಬಡತನದ ಜಾಗಕ್ಕೆ ಐಶಾರಾಮಿ ಕಾರಿನಲ್ಲಿ ಆಗಮಿಸುವ ನಾಯಕ ಜನರ ದಿಕ್ಕಾರಕ್ಕೆ ಸೆಡ್ಡು ಹೊಡೆದು “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎನ್ನುವ ಪವರ್ ಪುಲ್ ಸಂಭಾಷಣೆ , ಕಣ್ಮನ ಸೆಳೆಯುವ ಛಾಯಾಗ್ರಹಣ “ವಾರ್ನರ್” ನಲ್ಲಿದ್ದು, ಕೋವಿಡ್ ನಿಂದ ಜಾಗತಿಕ ಹಣದುಬ್ಬರ ಸಮಸ್ಯೆ ಸೃಷ್ಟಿಸಿದರೆ ಕೃತಕ‌ಬುದ್ದಿ ಮತ್ತೆಯಿಂದ ನಿರುದ್ಯೋಗ ಸಮಸ್ಯೆ, ಯುದ್ದದಿಂದ 2040 ರಲ್ಲಿ ದೇಶ ಹೇಗಿರಬಹುದು ಎನ್ನುವುದನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಉಪೇಂದ್ರ.

ಉಚಿತ ಮೊಬೈಲ್ ವಿತರಣೆ, ಮಂಗಳ ಗ್ರಹಕ್ಕೆ ಲಗ್ಗೆ, ಅತ್ಯಾಧುನಿಕ ಶಸ್ತಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದರೂ, ಬಾಳೆ ಹಣ್ಣು ಖರೀದಿ ಮಾಡಲು ಸಾದ್ಯವಾಗದ ಬಡತನದ ಬೇಗೆಯ ತಿರುಳು ಹೊಂದಿರುವ ಈ “UI” ಚಿತ್ರದ “ವಾರ್ನರ್” ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲಿ ಬಿಡುಗಡೆಯಾಗಿದೆ.

“ವಾರ್ನರ್” ಬಿಡುಗಡೆ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಈ ವೇಳೆ ಮಾತನಾಡಿದ ‌ನಟ,ನಿರ್ದೇಶಕ ಉಪೇಂದ್ರ, ಈ ಚಿತ್ರ ಇದೇ 20 ರಂದು ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ನಾನು, ನನ್ನ ಚಿತ್ರಗಳ ಯಾವುದೇ ವಿಷಯವನ್ನು ಬಿಡುಗಡೆ ಪೂರ್ವದಲ್ಲಿ ಜನರಿಗೆ ತೋರಿಸುವುದಿಲ್ಲ. ಬಿಡುಗಡೆ ಆದ ಮೇಲೆ ಜನ ಅದನ್ನು ನೋಡಲಿ ಎಂದು ಆಸೆ ಪಡುವವನು ನಾನು. ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಜನರಿಗೆ ತಮ್ಮ ಚಿತ್ರದ ಬಗ್ಗೆ ಟೀಸರ್ ಹಾಗೂ ಟ್ರೇಲರ್ ಗಳ ಮೂಲಕ ತಲುಪಿಸುವ ಪ್ರಯತ್ನವಾಗುತ್ತಿದೆ. ಹಾಗಾಗಿ ನಾನು “ವಾರ್ನರ್” ರಿಲೀಸ್ ಮಾಡಿದ್ದೇನೆ. ಇನ್ನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ. ಇನ್ನೇನಿದರೂ ಜನರು ಚಿತ್ರಮಂದಿರದಲ್ಲೇ ಚಿತ್ರ ನೋಡಬೇಕು. ಚಿತ್ರದ ಗೆಲುವಿನಲ್ಲಿ ಪ್ರೇಕ್ಷಕರ ನಿರ್ಧಾರವೇ ಅಂತಿಮ. ಏಕೆಂದರೆ, ಇಪ್ಪತ್ತೈದು ವರ್ಷಗಳ ಹಿಂದೆ ನಾನು A ಚಿತ್ರವನ್ನು ನಿರ್ದೇಶಿಸಿದ್ದಾಗ, ಗಾಂಧಿನಗರದವರಿಗೆ, ಮಿತ್ರರಿಗೆ ಹೀಗೆ ಯಾರೊಬ್ಬರಿಗೂ ಸಿನಿಮಾ ಇಷ್ಟ ಆಗಿರಲಿಲ್ಲ. ಆದರೆ ಜನರಿಗೆ ಚಿತ್ರ ಬಹಳ ಇಷ್ಟವಾಯಿತು.‌ ಅದಕ್ಕೆ ಆ ಚಿತ್ರದ ದಾಖಲೆ ಯಶಸ್ಸೇ ಉದಾಹರಣೆ. ನಾನು ಜನರಿಗೆ ಕನ್ ಫ್ಯೂಸ್ ಮಾಡುವುದಿಲ್ಲ. ಕನ್ ವಿನ್ಸ್ ಮಾಡುತ್ತೇನೆ ಎಂದರು.

ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮಾತನಾಡಿ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಪ್ರಚಾರ ಮಾಡುತ್ತೇವೆ. ಅಮೇರಿಕಾ, ಕೆನಡಾ, ಮದ್ಯ ಪ್ರಾಚ್ಯ ಆಸ್ಟ್ರೇಲಿಯಾ ಸೇರಿದಂತೆ ಮತ್ತಿತರ ಕಡೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.
.
ಇದು ಎಲ್ಲರ ಪಾಯಿಂಟ್ ಆಫ್ ವ್ಯೂ ನಲ್ಲಿ ಮಾಡಿದ ಸಿನಿಮಾ. 100 ವರ್ಷದ ನಂತರ ಉಪೇಂದ್ರ ಎನ್ನುವ ನಿರ್ದೇಶಕ ಇದ್ದರು ಎನ್ನುವುದನ್ನು ಈಗಲೇ ತೋರಿಸುತ್ತಿದ್ದಾರೆ. ಸಾಮಾಜಿಕ‌ ವಿಷಯ, ತತ್ವಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳ‌ ಬಗ್ಗೆ ಮಾತನಾಡುತ್ತಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್.

ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚೇತನ್ ಡಿಸೋಜಾ ಮಾತನಾಡಿ ಉಪೇಂದ್ರ ಜೊತೆ ಸಿನಿಮಾ ಮಾಡುವುದೆಂದರೆ ಪ್ರತಿ‌ಬಾರಿಯೂ ಅಪ್ ಡೇಟ್ ಆಗಬೇಕು ಎಂದರು. ಸಹ ನಿರ್ಮಾಪಕ ನವೀನ್ ಮನೋಹರನ್ ಹಾಗೂ ಲಹರಿ ವೇಲು ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ನಿರ್ಮಾಪಕ ಜಿ.ಮನೋಹರನ್ ಹಾಗೂ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor