Same place, same team, same time 2 movie Pooje Started. ಒಂದೇ ತಂಡ, ಒಂದೇ ವೇದಿಕೆ, ಒಂದೇ ಮುಹೂರ್ತದಲ್ಲಿ ಎರಡು ಸಿನಿಮಾಗಳಿಗೆ ಚಾಲನೆ.
ಒಂದೇ ಮುಹೂರ್ತದಲ್ಲಿ ಎರಡು ಸಿನಿಮಾಗಳು
ಅಪರೂಪಕ್ಕೆ ಎನ್ನುವಂತೆ ಶುಭ ಶುಕ್ರವಾರದಂದು ’ಆ..ಈ..’ ಮತ್ತು ’ರಾಜ ದೇವ ಸಿಂಧು’ ಚಿತ್ರಗಳ ಮುಹೂರ್ತ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಕಿಕ್ಕಿರಿದ ಆಹ್ವಾನಿತರ ಸಮ್ಮುಖದಲ್ಲಿ ನಡೆಯಿತು. ಎರಡು ಸಿನಿಮಾಗಳಿಗೆ ನಿರ್ದೇಶಕರಾಗಿ ದುರ್ಗ ಮೋಹನ್ ಹಾಗೂ ಆರ್ಎಸ್ಪಿ ಪ್ರೊಡಕ್ಷನ್ಸ್-ಚಿನ್ಮಯ್ ಸಿನಿ ಕ್ರಿಯೇಶನ್ಸ್ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ನಿರ್ದೇಶಕರು ಮಾತನಾಡುತ್ತಾ ಕಥೆಗೆ ಪೂರಕವಾದ ’ಆ’ ದಿನಗಳು, ’ಈ’ ದಿನಗಳು ಶೀರ್ಷಿಕೆಯನ್ನು ಪ್ರೇಕ್ಷಕರ ಕುತೂಹಲಕ್ಕಾಗಿ ’ಆ..ಈ..’ ಅಂತ ಇಡಲಾಗಿದೆ. ಕಾಶಿನಾಥ್ ಪ್ರೇರಣೆಯಿಂದ ಹಾಸ್ಯ ಕಥೆಯನ್ನು ಸಿದ್ದಪಡಿಸಿ, ಅದರೊಂದಿಗೆ ಸಂದೇಶವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಹಳ್ಳಿ ಬದುಕು, ಕಾರ್ಪೋರೇಟ್ ಜೀವನ. ನಮ್ಮ ಕಾಲ, ಇಂದಿನ ಯುವ ಪೀಳಿಗೆ. ಎರಡರಲ್ಲೂ ಒಳ್ಳೇದು ಕೆಟ್ಟದ್ದು ಇರುತ್ತದೆ. ಇದರಲ್ಲಿ ಒಳ್ಳೆಯದನ್ನು ತೆಗೆದುಕೊಂಡರೆ ಸುಂದರ ಜೀವನ ಆಗುತ್ತದೆ. ಪ್ರಚಲಿತ ವಿದ್ಯಾಮಾನಗಳು, ಜತೆಗೆ ನಾಲ್ಕು ಭಿನ್ನ ರೀತಿಯ ಪ್ರೀತಿಯ ಸಾರವನ್ನು ಹೇಳಲಾಗುತ್ತಿದೆ.
ದ್ವಿ ಪಾತ್ರದಲ್ಲಿ ಭಾರ್ಗವ್ ನಾಯಕ. ಹಳ್ಳಿ ಜೋಡಿಗಳು ಸಿಟಿಗೆ ಬಂದಾಗ ಅವರಿಗೆ ನೆಲೆ ನಿಲ್ಲಲು ಸಹಾಯ ಮಾಡುವ ತೂಕದ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್, ಸುಧಾರಾಣಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶ್ವೇತಾಸಂಕೇತ್, ಛವಸಖಿ ತಿಮ್ಮಯ್ಯ, ಮೋನಿಕಾವಸಿಷ್ಠ, ಆರಾ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ವಿವೇಕ್ ಜಂಗ್ಲಿ, ಮೂರು ಸಾಹಸ ಹಾಗೂ ನಾಲ್ಕು ಹಾಡುಗಳಿಗೆ ಬೇರೆ ಬೇರೆ ಮಾಸ್ಟರ್ಗಳ ಅಡಿಯಲ್ಲಿ ಚಿತ್ರೀಕರಿಸಲು ಯೋಚಿಸಲಾಗಿದೆ.
ಎರಡನೇ ಸಿನಿಮ ’ರಾಜ ದೇವ ಸಿಂಧು’ ಫ್ಯಾಂಟಸಿ ಹಾಗೂ ಪ್ರಸಕ್ತ ಜನರೇಶನ್ ಕಾಲ್ಪನಿಕ ಕತೆಯನ್ನು ಹೊಂದಿರುತ್ತದೆ. ನಾವುಗಳು ರಾಜನ ಬಗ್ಗೆ ನೆನಪು ಮಾಡಿಕೊಂಡರೆ, ಮೊದಲು ಕೃಷ್ಣದೇವರಾಯ ಕಣ್ಣ ಮುಂದೆ ಬರುತ್ತಾರೆ. ಅವರು ಮಾಡಿದಂತಹ ಮಹಾನ್ ಕೆಲಸಗಳು, ಕವಿಗಳಿಗೆ ಆಶ್ರಯ, ಯಾತ್ರಾರ್ಥಿಗಳಿಗೆ ತಂಗು ತಾಣಗಳ ನಿರ್ಮಾಣ. ಇಂತಹ ಹಲವು ಅಂಶಗಳನ್ನು ಸಂಶೋಧನೆ ನಡೆಸಿ ಚಿತ್ರಕಥೆಗೆ ಬಳಸಲಾಗಿದೆ. ’ರಾಜ’ ಇಂದಿನವನಾಗಿ, ಡಿಲಿವರಿ ಬಾಯ್ ಆಗಿರುತ್ತಾನೆ. ’ದೇವರಾಯ’ ಹಿನ್ನಲೆಯಲ್ಲಿ ಬರುತ್ತದೆ. ಯುವರಾಣಿ ’ಸಿಂಧುಜ’. ಹೀಗೆ ಮೂರು ಸೇರಿಕೊಂಡು ಸಿನಿಮಾ ಸಾಗುತ್ತದೆ.
ಇದರಲ್ಲೂ ಭಾರ್ಗವ ನಾಯಕ. ಸ್ವಾತಿಪ್ರಭು, ಛವಸಖಿ ತಿಮ್ಮಯ್ಯ, ಆರಾ ನಾಯಕಿಯರು. ತಂಗಿಯ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿದೆ. ಛಾಯಾಗ್ರಹಣ ಪ್ರಜ್ವಲ್ ದೇವರಾಜ್ ಅವರದಾಗಿದೆ. ಬೆಂಗಳೂರು, ಮಡಕೇರಿ, ಮಂಗಳೂರು ಹಾಗೂ ರಾಜರ ಕಾಲದ ದೃಶ್ಯಗಳನ್ನು ಸೆಟ್ಗಳಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಿಕೊಂಡಿದೆ. ಉಳಿದ ವಿಷಯಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ.